Sunday 1 December 2013

ಪ್ರಾರ್ಥನೆಯ ವಿಧಗಳು





ಪ್ರಾರ್ಥನೆಯಲ್ಲಿ ಅನೇಕ ವಿಧಗಳುಂಟು  ಅದರಲ್ಲಿ ಪ್ರಾಮುಖ್ಯವಾದದ್ದು
1. ವೈಯಕ್ತಿಕ ಪ್ರಾರ್ಥನೆ - ದೇವರೊಂದಿಗೆ ಸಂಭಾಷಿಸುವದು (ವಿಮೋಚನಕಾಂಡ 33:11)
ಸಾಮಾನ್ಯವಾಗಿ ಸಂಭಾಷಣೆಯೆಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಮಾತನಾಡುವದು ಅಥವಾ ವಿಷಯಗಳನ್ನು ಹಂಚಿಕೊಳ್ಳುವದೆಂಬದು ಎಲ್ಲರಿಗೂ ತಿಳಿದ ಸಾಮಾನ್ಯ ಸಂಗತಿಯಾಗಿದೆ, ಆದರೆ ಪ್ರಾರ್ಥನೆ ಮಾಡುವ ಕ್ರೈಸ್ತರು ಇದನ್ನು ಮರೆತಂತಿದೆ, ಕೇವಲ ನಮಗೇನು ಬೇಕು, ನಮ್ಮ ಇಷ್ಟವೇನು - ನಮ್ಮ ಕಷ್ಟವೇನು ಎಂಬ ಸ್ವಹಿತ ಆಧಾರಿತ ಮನವಿಗಳನ್ನು ಆತನ ಬಳಿ ಸುರಿದು ನಮ್ಮನ್ನು ನಾವು ಹಗುರ ಮಾಡಿಕೊಳ್ಳುವದು ಪ್ರಾರ್ಥನೆಯಲ್ಲ!  ಬದಲಾಗಿ ನಮ್ಮ  ಅಗತ್ಯತೆಗಳಿಗೆ ಮತ್ತು ನಮ್ಮ ಸಮಸ್ಯೆಗಳಿಗೆ ದೇವರ ಉತ್ತರವೇನು ಎಂಬದನ್ನು ಕೇಳಿ ತಿಳಿದು ಕೊಳ್ಳುವದೂ ಆತನ ಸ್ವರವನ್ನು ಕೇಳುವದು ಆತನ ಹೃದಯದ ಭಾರವನ್ನು ಅರಿತುಕೊಳ್ಳುವದೇ ಪ್ರಾರ್ಥನೆಯ ಕೇಂದ್ರ ಬಿಂದುವಾಗಿದೆ! (ಆದಿಕಾಂಡ 18:17-19)

2.ವಿಜ್ಞಾಪನೆ.
"ಎಲ್ಲದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ....ಮಾಡಬೇಕು....ಹಾಗೆಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ." (1ತಿಮೊಥೆಯನಿಗೆ 2:1-4) ಎಲ್ಲಾ ಮನುಷ್ಯರೂ ರಕ್ಷಣೆ ಹೊಂದಲು ಬರೀ ಸುವಾರ್ತೆ ಸಾರಿದರೆ ಪ್ರಯೋಜನವಿಲ್ಲ! ಮೊದಲು ದೇವರ ಬಳಿ ಕರುಣೆಗಾಗಿ ಬೇಡಿ ಕೃಪೆಯ ಅವಧಿ ವಿಸ್ತರಿಸುವಂತೆ ವಿಜ್ಞಾಪನೆ ಮಾಡಿ (ಯೋಹಾನ 6:65, 1ತಿಮೊಥೆಯನಿಗೆ 2:1)
ನಂತರ ಬಲಿಷ್ಠನನ್ನು ಕಟ್ಟಿಹಾಕಬೇಕಾದದ್ದು ಅತ್ಯಾವಶ್ಯ (ಮತ್ತಾಯ 12:29) ನಂತರವೇ ಸವಾರ್ತೆಯು ಫಲಭರಿತವಾಗುವುದು. 
ಹೇಗೆ ಭೂಮಿಯನ್ನು ಮೊದಲು ಶುಚಿಮಾಡಿ ಹದಗೊಳಿಸಿ ನಂತರ ಬೀಜ ಬಿತ್ತಿದರೆ 80%ರಷ್ಟಾಗಲಿ 100%ರಷ್ಟಾಗಲಿ ಫಲಕೊಡುತ್ತದೋ ಹಾಗೆಯೇ ಸುವಾರ್ತೆಯ ಬೀಜ ಬಿತ್ತುವ ಮೊದಲು ಶುದ್ಧೀಕರಣದ ಅಗತ್ಯವಿದೆ! (ಲೂಕ 8:11)
ಇದನ್ನು ಆತ್ಮೀಕ ಯುದ್ಧ ಎಂಬುದಾಗಿ ಕರೆಯುತ್ತೇವೆ. ಈ ಆತ್ಮೀಯ ಯುದ್ಧದ ತಂತ್ರೋಪಾಯಗಳಿಗಾಗಿ 
ನಮ್ಮ  samruddhakarnataka.blogspot.in   ಬ್ಲಾಗ್  ನೋಡಿ.

Monday 25 November 2013

ಪ್ರಾರ್ಥನೆ ಫಲ ತರುವುದು ಯಾವಾಗ?



ಕರ್ತನಾದ ಯೇಸು ಹೀಗೆ ಹೇಳುತ್ತಾನೆ
  "ನೀವು ನನ್ನಲ್ಲಿಯೂ, ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು"  ಯೋಹಾನ 15:7

ಕರ್ತನಾದ ಯೇಸು  ಎಷ್ಟು ಮಹಿಮೆಯುಳ್ಳವನೋ ಅದರಂತೆ ಆತನ ವಾಕ್ಯಗಳನ್ನು ಒಳಗೊಂಡ ಸತ್ಯವೇದವು(ಬೈಬಲ್) ಮಹಿಮೆಯುಳ್ಳದ್ದಾಗಿದೆ.
ನಾವು ದೇವರಲ್ಲಿ ನೆಲೆಗೊಂಡಿರಬೇಕು, ಆತನ ಆಜ್ಞೆಗಳನ್ನು ನಮ್ಮ ಹೃದಯದಲ್ಲಿಟ್ಟು, ಅದರಂತೆಯೇ ನಡೆಯಬೇಕು. ದೇವರ ವಾಕ್ಯವು (ಆಜ್ಞೆಗಳು) ನಮ್ಮ ಕಾಲಿಗೆ ದೀಪವಾಗಿಯೂ, 
ನಮ್ಮ ಮಾರ್ಗಕ್ಕೆ ಬೆಳಕಾಗಿಯೂ ಇವೆ.  ಅದರಂತೆ ನಡೆಯುವವರಿಗೆ  ಆಡ್ಡಿ ಆತಂಕಗಳಿಲ್ಲ, ಕಾಲು ಜಾರುವುದೂ ಇಲ್ಲ, ಅದು ಸನ್ಮಾರ್ಗವಾಗಿರುತ್ತದೆ.

ಬಳ್ಳಿಯು ಗಿಡದಲ್ಲಿ ನೆಲೆಗೊಂಡಿರದಿದ್ದರೆ, ಅದು ಬೇರೆಯಾಗಿದ್ದು ಫಲಕೊಡಲು ಸಾದ್ಯವಿಲ್ಲ! 
ಆದ್ದರಿಂದ

 ನೀವು ಕ್ರಿಸ್ತನಲ್ಲಿ ನೆಲೆಗೊಂಡಿರಿ,
           ಆತನ ವಾಕ್ಯಗಳು ನಮ್ಮ ಹೃದಯಗಳಲ್ಲಿರಲಿ,

 ಆಗ ನಿಮ್ಮ ಪ್ರಾರ್ಥಿಸುವ ಪ್ರಾರ್ಥನೆಗಳು, ವಿಜ್ಞಾಪನೆಗಳು ದೇವರ ಸನ್ನಿಧಿಯನ್ನು ತಲುಪುತ್ತವೆ. ನಿಮ್ಮ ಹೃದಯದ ಬಯಕೆಗಳು, ನಿಮ್ಮ ಕೋರಿಕೆಗಳು ಯಾವುದಿದ್ದರೂ ಅವುಗಳನ್ನು ನೀವು ಹೊಂದಬಹುದು. ನಿಮ್ಮ ಕಾರ್ಯಗಳು ಸಫಲವಾಗುವುದು. ದೇವರು ನಿಮ್ಮ ಪಕ್ಷದಲ್ಲಿರುವನು. ನಿಮ್ಮ ಪ್ರಯಾಸಗಳು, ಪರಿಶ್ರಮಗಳು ವ್ಯರ್ಥವಾಗುವುದೇ ಇಲ್ಲ. 

 ನೀವು ದೇವರಲ್ಲಿ ನೆಲೆಗೊಂಡಿರದೆ, ಆತನಿಂದ ದೂರವಾಗುವಾಗ ಆತನೂ ನಿಮ್ಮಿಂದ ದೂರವಾಗುವನು.

"ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು"  ಯೋಹಾನ 15:6

Tuesday 5 November 2013

ಯಾಕೆ ಪ್ರಾರ್ಥಿಸಬೇಕು?




(ಗಮನವಿಟ್ಟು ಓದಿದರೆ ಮಾತ್ರ ದೇವರ ಈ ಯೋಜನೆಯನ್ನು ತಿಳಿಯಲು ಸಾಧ್ಯ. ಅರ್ಥವಾಗದಿದ್ದರೆ ಫೋನ್ ಮಾಡಿರಿ 9945804171)

"...ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಿರಿ.....ಅರಸುಗಳಿಗಾಗಿಯೂ, ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು"  1 ತಿಮೊಥೆಯ 2:1

ಸರ್ವಲೋಕದ ಅಧಿಪತಿ, ಅಖಿಲಾಂಡವನ್ನು ನಿರ್ಮಿಸಿದವನು ಇಡೀ ಜಗತ್ತನ್ನು, ಅಧಿಕಾರಿಗಳನ್ನೂ, ರಾಜಕೀಯ ನಾಯಕರನ್ನೂ ಸನ್ಮಾರ್ಗಕ್ಕೆ ತಂದು ಆತ್ಮರಕ್ಷಣೆಯನ್ನೂ, ಪಾಪಕ್ಷಮಾಪಣೆಯ ನಿಶ್ಚಯವನ್ನೂ ಅನುಗ್ರಹಿಸಲು ಸಾಧ್ಯವಿಲ್ಲವೇ? ದೇವಮನುಷ್ಯನು ಪ್ರಾರ್ಥಿಸಬೇಕೆಂದು ದೇವರು ಎದುರು ನೋಡುವುದು ಯಾಕೆ? ದೇವ ಜನರ ಪ್ರಾರ್ಥನೆಯಿಲ್ಲದೆ ದೇವರು ತನ್ನ ಕಾರ್ಯವನ್ನು ನೆರವೇರಿಸಲು ಸಾಧ್ಯವಿಲ್ಲವೇ?

ಹೌದು ಸಾಧ್ಯವೇ ಇಲ್ಲ!!!

ಯಾಕೆಂದರೆ.....,
ದೇವರು ಈ ಲೋಕವನ್ನೂ ಅದರಲ್ಲಿರುವ ಸಮಸ್ತವನ್ನು ಉಂಟುಮಾಡಿ ಅದನ್ನು ಮನುಷ್ಯನಿಗೆ ಕೊಟ್ಟನು. ಬೈಬಲ್ ನಲ್ಲಿ ಆದಿಕಾಂಡ ಎಂಬ ಭಾಗದಲ್ಲಿ  ನಾವು ನೋಡುವಂತೆ ದೇವರು ತನ್ನ ಸ್ವಾರೂಪ್ಯದಲ್ಲಿ ಉಂಟು ಮಾಡಿದ ಆದಾಮ ಮತ್ತು ಹವ್ವರನ್ನು ಅಶೀರ್ವದಿಸಿ "ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ" ಅಂದನು.  ಅದರ ಯಥಾರ್ಥ ಅರ್ಥವೇನೆಂದರೆ, ದೇವರು ತಾನು ಉಂಟು ಮಾಡಿದ ಸಮಸ್ತ ಆಸ್ತಿಯನ್ನೂ, ಅದರ ಮೇಲಿನ ದೊರೆತನವನ್ನೂ ಮನುಕುಲದ ಹೆಸರಿಗೆ ವರ್ಗಾಯಿಸಿದನು. ಅಂದರೆ ಈ ಜಗತ್ತಿನ ಹಕ್ಕುದಾರ ಮನುಷ್ಯನಾಗಿ ಮಾರ್ಪಡುತ್ತಾನೆ. ಹಕ್ಕುದಾರನ ಅನುಮತಿ ಅಥವಾ ಕೋರಿಕೆಯಿಲ್ಲದೆ (ಪ್ರಾರ್ಥನೆ) ದೇವರು ಈ ಜಗತ್ತಿನ ಕಾರ್ಯಗಳಲ್ಲಿ ಹಸ್ತಕ್ಷೇಪಮಾಡುವ ಹಾಗಿಲ್ಲ. ಯಾಕೆಂದರೆ, ಆತನು ನೀತಿಯುಳ್ಳ ನ್ಯಾಯಾಧಿಪತಿ! 

ಮನುಷ್ಯನು ಹಕ್ಕುದಾರನಾದ ಮೇಲೆ ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳದೆ ವಂಚಕನಾದ ಸೈತಾನನ ಬಳಿ ಒತ್ತೆಯಿಟ್ಟ ಅಂದರೆ ದೇವರ ಆಲೋಚನೆಯನ್ನು ಕೇಳಿ ಅದರಂತೆ ಈ ಜಗವನ್ನು ಮುನ್ನಡೆಸಿಕೊಂಡು ಹೋಗುವ ಬದಲು ದೇವಲೋಕಕ್ಕೆ ವೈರಿಯಾದ ಸೈತಾನನ ವಂಚನೆಯ ಆಲೋಚನೆಯನ್ನು ಕೇಳಿ ತನಗೆ ಅನುಗ್ರಹವಾಗಿ ದೊರಕಿದ ಎಲ್ಲಾ ಅಂತಸ್ತು, ಅಧಿಕಾರವನ್ನು ಸೈತಾನನಿಗೆ ಒತ್ತೆಯಿಟ್ಟ. ಇದಕ್ಕೆ ಆಧಾರವಾಗಿ ಲೂಕನ ಸುವಾರ್ತೆ ೪:೬ ರಲ್ಲಿ ಈ ರೀತಿಯಾಗಿ ನೋಡುತ್ತೇವೆ. "ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;" ವಾಸ್ತವದಲ್ಲಿ  ಈ ಲೋಕದ ಅಧಿಕಾರ ದೇವರಿಂದ ಸೈತಾನನಿಗೆ ಕೊಡಲ್ಪಡಲಿಲ್ಲ ಬದಲಾಗಿ ದೇವರಿಂದ - ಮನುಷ್ಯನಿಗೆ ಕೊಡಲ್ಪಟ್ಟಿತು-ಮನುಷ್ಯನು ತನ್ನ ಅವಿಧೇಯತೆಯಿಂದ ಸೈತಾನನಿಗೆ ಒತ್ತೆಯಿಟ್ಟ. ಒತ್ತೆಯಿಟ್ಟಾಗ ಈ ಲೋಕದ ಮೇಲಿನ ಅಧಿಕಾರ ಸೈತಾನನಿಗೆ ವರ್ಗಾಯಿಸಲ್ಪಟ್ಟಿತು.

ದೇವರ ಪ್ರತಿಯೊಂದು ಯೋಜನೆಯನ್ನೂ ಕೆಡಿಸಬೇಕೆಂದು ಸೈತಾನನು ಪಣತೊಟ್ಟು ಕಾಯುತ್ತಿದ್ದ.. 

ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಮೊದಲ ಸೈತಾನನ ಚರಿತ್ರೆಯನ್ನು ಸ್ವಲ್ಪ ಗಮನಿಸೋಣ. ಸೈತಾನ ಎಂಬುವವನು ಮೊದಲು ಲೂಸಿಫೆರನಾಗಿ ದೇವರಿಂದ ಉಂಟುಮಾಡಲ್ಪಟ್ಟ ಒಂದು ಗುಂಪಿನ ದೇವದೂತರ ಆರಾಧನಾ ತಂಡದ ನಾಯಕ. (ಯೆಶಾಯ ೧೪ನೇ ಅಧ್ಯಾಯದಲ್ಲಿ ಸವಿವರವಾಗಿ  ಲೂಸಿಫ಼ೆರನು ಉನ್ನತ ಪದವಿಯಿಂದ ಹೇಗೆ ತಳ್ಳಲ್ಪಟ್ಟನು ಎಂಬುದನ್ನು ನೋಡಬಹುದು.) "... ಉನ್ನತೋನ್ನತನಿಗೆ ಸರಿಸಮಾನನಾಗುವೆನು" ಅಂದರೆ ದೇವರಿಗೆ ಸರಿಸಮಾನನಾಗಬೇಕೆಂದು ಅಂದುಕೊಂಡದ್ದರಿಂದ ಪಾತಾಳಕ್ಕೆ ದೊಬ್ಬಲ್ಪಟ್ಟನು. ದೇವರು ನೀತಿಯುಳ್ಳವನು ಹಾಗೂ ತಾನು ಕೊಟ್ಟದ್ದನ್ನು ಹಿಂದಕ್ಕೆ ತೆಗೆದುಕೊಳ್ಳದವನಾಗಿರುವುದರಿಂದ ಲೂಸಿಫ಼ೆರನು ದೇವದೂತನಾಗಿದ್ದಾಗ ಅವನಿಗೆ ಇದ್ದಂತಹ ಕೆಲವು ಸೌಲಭ್ಯಗಳನ್ನು ದೇವರು ಹಿಂದಕ್ಕೆ ತೆಗೆಯಲಿಲ್ಲ, ಅದನ್ನೇ ಬಂಡವಾಳವನ್ನಾಗಿಸಿಕೊಂಡು ಸೈತಾನನು ಇಂದಿನವರೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಬಂದಿದ್ದಾನೆ. 

ದೇವರನ್ನು ಪರಲೋಕದಲ್ಲಿ ಮಹಿಮೆಪಡಿಸಲು ಇದ್ದ ಗುಂಪು(ಲೂಸಿಫೆರನ ಗುಂಪು) ತೆರವಾದ್ದದರಿಂದ ಆ ಸ್ಥಾನಕ್ಕೆ ಮನುಷ್ಯರನ್ನು ತಂದು ನಿಲ್ಲಿಸುವ ಸಲುವಾಗಿ ದೇವರು ಮನುಕುಲವನ್ನು ಸೃಷ್ಟಿ ಮಾಡಬೇಕಾಯಿತು, ಇದನ್ನು ನೋಡಿದ ಲೂಸಿಫೆರನಿಗೆ ತಡೆದುಕೊಳ್ಳಲಾಗಲಿಲ್ಲ, ತಾನು ಇದ್ದ ಆ ವೈಭವವಾದ ಸ್ಥಾನದಲ್ಲಿ ಈ ಮನುಷ್ಯ ಆಸೀನನಾಗುವುದನ್ನು ಸಹಿಸಲಾಗದೆ ಹೇಗಾದರೂ ದೇವರ ಈ ಯೋಜನೆಯನ್ನು ಕೆಡವಬೇಕೆಂದು ವಂಚನೆಯ ಮೂಲಕ ಮನುಷ್ಯನನ್ನು ತನ್ನ ಕೆಡೆಗೆ ಸೆಳೆದು ಈ ಲೋಕದ ಅಧಿಕಾರವನ್ನು ತನಗೆ ವರ್ಗಾಯಿಸಿಕೊಂಡ. ಹೀಗೆ ಭೂಮಿಯೂ ಅದರ ಸಮಸ್ತ ಅಧಿಕಾರವೂ ಮನುಷ್ಯನಿಂದ ಸೈತಾನನ ವಶಕ್ಕೆ ಹೋಯಿತು. 

ಹೀಗೆ ಮನುಷ್ಯನ  ಮುಖಾಂತರ ಸೈತಾನನಿಗೆ ಒತ್ತೆಯಿಟ್ಟ ಸಮಸ್ತವನ್ನೂ ಹಿಂತಿರುಗಿ ಪಡೆಯಬೇಕಾದರೆ ದೇವ ಲೋಕದ ನಿಯಮದ ಪ್ರಕಾರವೇ ಆಗಬೇಕು. ಅದೇನಂದರೆ ಒತ್ತೆಯಿಟ್ಟವನು ಅಥವಾ ಅವನ ಸಂತತಿ ಮಾತ್ರ ಅದನ್ನು ಬಿಡಿಸಬಹುದು ಆದರೆ ಅದಕ್ಕೆ  ನಿಷ್ಕಳಂಕವಾದ ರಕ್ತವನ್ನು ಈಡಾಗಿ ಕೊಡಬೇಕಾಗಿತ್ತು. ಆದರೆ ಇಡೀ ಮನುಕುಲವೇ ಪಾಪದಲ್ಲಿ ಅಂದರೆ ಸ್ತ್ರೀ-ಪುರುಷ ಸಂಪರ್ಕದಿಂದ ಜನ್ಮ ತಾಳಿದ್ದರಿಂದ ಅಲ್ಲಿ ನಿಷ್ಕಳಂಕ ರಕ್ತ ಹೊಂದಿದವರು ಯಾರೂ ಇರಲಿಲ್ಲ.  ಆಗ ತಂದೆಯಾದ ದೇವರಿಗೆ ಇದ್ದಂತಹ ಒಂದು ಮಾರ್ಗವೆಂದರೆ ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕಳುಹಿಸುವುದಾಗಿತ್ತು. ಆಗ ಮರಿಯಳು ಎಂಬ  ಕನ್ನಿಕೆಯನ್ನು ಆರಿಸಿ ಆಕೆ ಪವಿತ್ರಾತ್ಮನಿಂದ ಗರ್ಭವತಿಯಾಗಿ ಲೋಕ ರಕ್ಷಕನಿಗೆ ಜನ್ಮ ನೀಡುವ ಹಾಗೆ ತಂದೆಯಾದ ದೇವರು ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸಿದನು. 

ಆದಾಮನ ಮೂಲಕ ಒತ್ತೆಯಿಟ್ಟ ಈ ಲೋಕವು ಯೇಸುವಿನ ಮರಣ ಮತ್ತು ಪುನರುತ್ಥಾನದ ಮೂಲಕ ಮತ್ತೆ ಈ ಮನುಕುಲಕ್ಕೆ ದೊರೆಯಿತು. ಹೀಗೆ ಸಮಸ್ತ ಅಧಿಕಾರವು ಮನುಷ್ಯನಿಗೆ ವರ್ಗಾಯಿಸಲ್ಪಟ್ಟಿರುವುದರಿಂದ ದೇವರು ಈ ಭೂಮಿಯಲ್ಲಿ ತನ್ನ ಕ್ರಿಯೆಗಳನ್ನು ಮಾಡಬೇಕಾದರೆ ದೇವರಿಗೆ ಒಬ್ಬ ವ್ಯಕ್ತಿಯ ಅವಶ್ಯಕತೆಯಿದೆ, ಆತನೇ ’ಪ್ರಾರ್ಥನಾ ಯೋಧ’. ಮನುಷ್ಯನು ಪ್ರಾರ್ಥಿಸದಿದ್ದರೆ ದೇವರು ಈ ಭೂಮಿಯಲ್ಲಿ ಕ್ರಿಯಾಶೀಲನಾಗಲು ಸಾಧ್ಯವಿಲ್ಲ.
 
ಓ ಸ್ನೇಹಿತನೇ, ಪ್ರಾರ್ಥಿಸಲು ಸಿದ್ಧನಿರುವೆಯಾ? 

ಪ್ರಾರ್ಥಿಸಲು ಕಲಿಯಿರಿ! ಪ್ರಾರ್ಥಿಸಿರಿ!! ದೇಶದಲ್ಲಿ ಬದಲಾವಣೆಯನ್ನು ಕಾಣಿರಿ!!!

Thursday 31 October 2013

ಪ್ರಾರ್ಥನಾ ಜೀವಿತ ನಿಮ್ಮದಾಗಲಿ! ನಿಮ್ಮ ಜೀವಿತ ರೂಪಾಂತರವಾಗಲಿ!!


ಆತ್ಮೀಯರೇ,

 ಮಾದರಿ ಪ್ರಾರ್ಥನೆಗಳು ನಿಮಗೂ ದೇವರಿಗೂ ನಡುವೆ ನೇರ ಸಂಪರ್ಕವನ್ನು ಸಾಧಿಸುವಲ್ಲಿ ನಿಮಗೆ ಸಹಾಯ ಮಾಡಿದೆ ಎಂದು ನಂಬುತ್ತೇವೆ.
ಈ ಎರಡನೆಯ ಭಾಗವು 1ತಿಮೊಥೆಯನಿಗೆ 2:1-4 ನೇ ವಚನದಿಂದ ಪ್ರಾರಂಭವಾಗುತ್ತದೆ " ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣ ಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮಾ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ. ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ."  ಹೌದು ದೇವರ ಚಿತ್ತವನ್ನು ನೆರವೇರಿಸಲೆಂದೇ ನಾವು ಈ ಭೂಮಿಯಲ್ಲಿ ಇಡಲ್ಪಟ್ಟು ಕೃಪೆಯಿಂದ ರಕ್ಷಿಸಲ್ಪಟ್ಟಿದ್ದೇವೆ.
ಆದರೆ ಇದನ್ನು ಮಾಡಲು ನಮ್ಮ ಆತ್ಮಸಮರ್ಪಣೆ ಅನಿವಾರ್ಯವಾಗಿದೆ ! ಹೌದು ದೀಪವು ತನ್ನಲ್ಲಿರುವದನ್ನು ಕೊಡದಿದ್ದರೆ ಬೆಳಗಲಾರದು - ಉಪ್ಪು ನೀರಿನಲ್ಲಿ ಕರಗದಿದ್ದರೆ ರುಚಿಕೊಡಲಾರದು.(ಮತ್ತಾಯ 5:13-14)
 ಈ ಲೋಕಕ್ಕೆ ಬೆಳಕಾಗಿಯೂ ಭೂಮಿಗೆ ಉಪ್ಪಾಗಿಯೂ ಕರೆಯಲ್ಪಟ್ಟಿರುವ ನೀವು ನಿಮ್ಮ ಸ್ವಹಿತವನ್ನು ತ್ಯಜಿಸಿ ದೇವರಿಗೆ ನಿಮ್ಮ ಸಂಪೂರ್ಣ ಜೀವಿತವನ್ನೂ ಹೃದಯದಲ್ಲಿ ಪ್ರಥಮಸ್ಥಾನವನ್ನೂ ಕೊಡದಿದ್ದರೆ ಹೇಗೆ ಬೆಳಕಾಗಿಯೂ-ಉಪ್ಪಾಗಿಯೂ ಇರಲು ಸಾಧ್ಯ ? ಆದ್ದರಿಂದ ಈ ಮಧ್ಯಸ್ಥಿಕೆಯ ಪ್ರಾರ್ಥನೆಗೆ ನಿಮ್ಮ ಸಮರ್ಪಣಾ ಜೀವಿತದ ಕ್ರಯಸಲ್ಲಿಸುವಿಕೆ ಅತ್ಯಾವಶ್ಯವಾಗಿದೆ.
ಯಾಕೆಂದರೆ ದೇವರಿಂದ ಕೇಳಿ ಪಡೆಯಲು ನಾವು ಹಕ್ಕುಳ್ಳವರಾಗಿದ್ದೇವೆ ಆತನು ನಮ್ಮ ತಂದೆಯೂ ನಾವು ಆತನ ಮಕ್ಕಳೂ ಆಗಿರುವದರಿಂದ ಈ ಹಕ್ಕು ನಮಗುಂಟು ! ಆದರೆ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ನಾವು ನಮಗಾಗಿ ಅಲ್ಲ ಬೇರೆಯವರ ಪರವಾಗಿ  ದೇವರ ಸಮ್ಮುಖದಲ್ಲಿ ನಿಂತು ಪಾತ್ರರಲ್ಲದವರನ್ನು ಪಾತ್ರರನ್ನಾಗಿಸುವಂತೆ ದೇವರ ಕರುಣೆಗಾಗಿ ಬೇಡುವವರಾಗಿಯೂ - ಬಂಧನದಲ್ಲಿರುವವರ ಕಟ್ಟುಗಳನ್ನು ಬಿಚ್ಚಲು ಶತ್ರುವಿನೊಂದಿಗೆ ಹೋರಾಡಲು ಮುಂದುವರೆಯುತ್ತಿದ್ದೇವೆ ! ಆದರೆ ಇದಕ್ಕೆ ನಮಗೆ ಕೆಲವು ಅರ್ಹತೆ ಮತ್ತು ಅಧಿಕಾರದ ತಿಳುವಳಿಕೆಯ ಅಗತ್ಯವಿದೆ.

ಅದನ್ನು ತಿಳಿಯುವ ಮೊದಲು ಕೆಲವು ತಡೆಗಳನ್ನು ದಾಟಿ ಮುಂದೆ ಹೋಗುವ;
 ಈ ಸತ್ಯವನ್ನು ಅರಿಯದವರು ಇದು ದೇವರಿಂದ ಬಂದದ್ದಲ್ಲವೆಂದೂ ಮನುಷ್ಯ ಕಲ್ಪನೆಯೆಂದೂ ವಿವಾದಿಸಬಹುದು ಆದರೆ ದೇವರವಾಕ್ಯವು  1ಪೇತ್ರನು 2:9 ರಲ್ಲಿ " ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕಿಯ ಪ್ರಜೆಯೂ ಆಗಿದ್ದೀರಿ." ಎಂದು ಬರೆದದೆ. ದೇವರು ನಮ್ಮ ಪ್ರತಿಯೊಬ್ಬರನ್ನೂ ರಾಜರನ್ನಾಗಿಯೂ ಯಾಜಕರನ್ನಾಗಿಯೂ ಕರೆದಿರುವದರಿಂದ ನಾವು ರಾಜನ ಸ್ಥಾನದಲ್ಲಿ ನಿಂತು ಶತ್ರುವಿನೊಂದಿಗೆ ಹೋರಾಡುವದೂ ಯಾಜಕನ ಸ್ಥಾನದಲ್ಲಿ ನಿಂತು ಎಲ್ಲಾ ಮನುಷ್ಯರಿಗಾಗಿ ದೇವರ ಸಮ್ಮುಖದಲ್ಲಿ ವಿಜ್ಞಾಪಿಸುವದೂ ನಮಗೆ ಅನಿವಾರ್ಯವಾಗಿದೆ. ಆದರೂ ಇದು ನಮ್ಮಿಂದಾಗದು ನಮಗೆ ಸಮಯವಿಲ್ಲಾ ಅಥವಾ ನಾವು ಬೇರೆ ರೀತಿಯಲ್ಲಿ ಸೇವೆಮಾಡುತ್ತೇವೆ ಎಂದು ಹೇಳುವವರಿಗೆ ಒಂದು ಸತ್ಯವನ್ನು ಹೇಳಲು ಬಯಸುತ್ತೇವೆ. ಒಂದು ನಿಮಿಷ ನೀವು ನಿಮ್ಮ ಸ್ವಂತ ಜೀವಿತದ ಕುರಿತಾದ ನಿಮ್ಮ ಸ್ವಾರ್ಥ ಚಿಂತನೆಗಳನ್ನೂ ಕನಸುಗಳನ್ನೂ ನಿಮ್ಮದೇ ಆದ ಯೋಜನೆಗಳನ್ನೂ ಬದಿಗಿರಿಸಿ ದೇವರ ದೃಷ್ಠಿಯಲ್ಲಿ ನೀವು ಹೇಗಿದ್ದೀರಿ? ನಿಮ್ಮ ಜೀವನದ ಕುರಿತಾಗಿ ಆತನು ರೂಪಿಸಿರುವ ಯೋಜನೆಗಳೇನು? ಯಾತಕ್ಕಾಗಿ ಈ ಭೂಮಿಯಲ್ಲಿ ಜೀವಿಸುತ್ತಿದ್ದೀರಿ ನಿಮ್ಮದೇ ಆದ ಪ್ರಪಂಚದಲ್ಲಿ ವಿಹರಿಸಲೋ ಅಥವಾ ನಿಮ್ಮ ಸೃಷ್ಠಿಕರ್ತನ ಪ್ರಯೋಜನಕ್ಕಾಗಿಯೋ? ಎಂಬದನ್ನು ಆಲೋಚಿಸಿರಿ ! ದೇವರು  ಹೇಗೆ ನಿಮ್ಮನ್ನು ಒಬ್ಬ ರಾಜರಾಗಿ ಯಾಜಕರಾಗಿ ಕಾಣುತ್ತಿರುವರೋ  ನೀವೂ ನಿಮ್ಮನ್ನು ಹಾಗೆಯೇ ನೋಡಿರಿ ನೀವು ನಿಮ್ಮನ್ನೂ ನಿಮ್ಮ ಜೀವಿತವನ್ನೂ ಕುರಿತಾಗಿ ಯೋಚಿಸುವ ವಿಧವನ್ನು ಬದಲಾಯಿಸಿರಿ ! ದೇವರ ಕೈಗಳಲ್ಲಿ ನಿಮ್ಮ ಜೀವಿತವನ್ನು ರೂಪಾಂತಕ್ಕಾಗಿ ಒಪ್ಪಿಸಿಕೊಡಿರಿ! ದೇವರ ವಾಕ್ಯದ ಗೂಡಾರ್ಥಗಳನ್ನು ಪ್ರಕಟಿಸುವಂತೆ ದೇವರಾತ್ಮನಲ್ಲಿ ಬಿನ್ನಹಿಸಿರಿ ದೇವರ ಸಮ್ಮುಖದಲ್ಲಿ ಕಾದಿರಿ! ದೇವರಾತ್ಮನ ಮಾರ್ಗದಲ್ಲಿ ಮುನ್ನಡೆಯಿರಿ.
ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೇನೆಂದರೆ ಹೇಗೆ ದೇವರ ಬಳಿಯಲ್ಲಿ ನಾವು ನಮಗಾಗಿ ಬೇಡಿ ಪಡೆದುಕೊಳ್ಳಲು ದೇವರ ಮಕ್ಕಳು ಎಂಬ ಸ್ಥಾನ ನಮಗಿದೆಯೋ ಹಾಗೆಯೇ ಪರರಿಗಾಗಿ ವಿಜ್ಞಾಪಿಸಲು ಅದರದೇ ಆದ ಸ್ಥಾನ ಮಾನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಹೇಗೆ ಒಂದು ಕೀಲಿಕೈ ಇಲ್ಲದೆ ಬಾಗಿಲನ್ನು ತೆರೆಯಲಾಗುವದಿಲ್ಲವೋ ಹಾಗೆಯೇ ಅರ್ಹರಾಗದೆ-ಅಧಿಕಾರವನ್ನು ತಿಳಿದುಕೊಳ್ಳದೆ ನಾವು ನಮ್ಮ ಸ್ಥಾನದಲ್ಲಿ ನಿಂತು ಕಾರ್ಯನಿರ್ವಹಿಸಲಾಗುವದಿಲ್ಲ. 
ಹಾಗಾದರೆ ಬನ್ನಿ ಅವುಗಳನ್ನು ತಿಳಿದುಕೊಳ್ಳೋಣ!

1. ಪರಿಶುದ್ಧತೆ:
 ಪರಿಶುದ್ಧತೆಯ ಬಗ್ಗೆ ಅನೇಕ ಬೋಧನೆಗಳುಂಟು ಆದರೆ ಇಲ್ಲಿ ನಿಮಗೆ ಯೇಸುಕ್ರಿಸ್ತನ ಮಾದರಿಯನ್ನು ಪರಿಚಯಿಸುತ್ತಿದ್ದೆವೆ. ಪರಿಶುದ್ಧತೆ ಎಂದರೆ ದೇವರಿಗಾಗಿ ಪ್ರತ್ಯೇಕಿಸಲ್ಪಟ್ಟ ಜೀವಿತ ಜೀವಿಸುವದು, ಅದು ಅಂತರಂಗದಲ್ಲಿ ಪ್ರಾರಂಭಿಸುತ್ತದೆ ! 
ತೋರಿಕೆಗಾಗಿ ಜನರಮುಂದೆ ಮತ್ತು ಸಭೆಗಳಲ್ಲಿ ಪರಿಶುದ್ಧರಂತೆ ವರ್ತಿಸುವದು ಪರಿಶುದ್ಧ ಜೀವಿತವಲ್ಲ ಹೃದಯವನ್ನು ಪರಿಶೋಧಿಸುವವನೂ ಬಾಯಿಂದ ಮಾತುಗಳು ಹೊರಡುವ ಮೊದಲೇ ಅವುಗಳನ್ನು ಅರಿತವನು ಆಗಿರುವ ದೇವರ ಮುಂದೆ ನಂಬಿಗಸ್ಥರಾಗಿ ಬಾಳುವದೇ ಪರಿಶುದ್ಧ ಜೀವಿತ (ಆದಿಕಾಂಡ 17:1) ಪ್ರಾರ್ಥನೆಗೆ ಪರಿಶುದ್ಧತೆಯೇ ಭೂಷಣ ಯಾಕೆಂದರೆ ಪರಿಶುದ್ಧತೆಯಿಲ್ಲದೆ ಯಾವನೂ ದೇವರನ್ನು ಕಾಣುವದಿಲ್ಲ (ಇಬ್ರಿಯರಿಗೆ 12:15) ದೇವರನ್ನು ನಾವು ಸಂದಿಸುವ ಸಮಯವು ಪ್ರಾರ್ಥನೆಯಾಗಿದೆ ! ಅಲ್ಲಿಯೇ ನಾವು ದೇವರ ಮುಖವನ್ನು ದರ್ಶಿಸುವವು !

2.  ದೇವರಲ್ಲಿ ನೆಲೆಗೊಂಡಿರುವದು :
ದೇವರಲ್ಲಿ ನೆಲೆಗೊಳ್ಳುವದೆಂದರೆ ಹೇಗೆ ನೀರಿನ ಬುಗ್ಗೆಯೂ ಎಲ್ಲಾ ಕಾಲಗಳಲ್ಲಿಯೂ ಬತ್ತಿಹೋಗದೆ ನೀರು ಉಕ್ಕಿಸುತ್ತದೋ ಹಾಗೆಯೇ ನಮ್ಮ ಸಂದರ್ಭ ಸನ್ನಿವೇಶಗಳನ್ನೂ ಜೀವನದ ಹಾಗುಹೋಗುಗಳನ್ನು ಪರಿಗಣಿಸದೆ ದೇವರಲ್ಲಿಯೂ ಆತನ ಕಾರ್ಯದಲ್ಲಿಯೂ ಆಸಕ್ತಿಯಿಂದಿರುವದು ಮತ್ತು ಆತನನ್ನು ಪ್ರೀತಿಸುವದು ! ಆತನನ್ನು ಪ್ರೀತಿಸುವದೆಂದರೆ ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವದು, ಆತನ ಆಜ್ಞೆಗಳನ್ನು ಕೈಗೊಂಡು ನಡೆಯುವದೆಂದರೆ ಎಲ್ಲಾ ಮನುಷ್ಯರನ್ನೂ ನಿನ್ನಂತೆಯೇ ಪ್ರೀತಿಸುವದು! (ಯೋಹಾನ 14:23, 15:9-12  ಮತ್ತು ಮತ್ತಾಯ 7:12)

3. ನಂಬಿಕೆ:
ನಂಬಿಕೆ ಎಂಬುದು ಕ್ರೈಸ್ತಜೀವಿತದ ಅಡಿಪಾಯವಾಗಿದೆ! ನಂಬಿಕೆಯೇ ನಾವು ರಕ್ಷಣೆ ಹೊಂದಲು ಮೊದಲ ಹೆಜ್ಜೆಯಾಗಿದೆ(ಅಪೋಸ್ತಲರ ಕೃತ್ಯ 16:31) ಮತ್ತು ಪ್ರಾರ್ಥನೆಗೆ ನಂಬಿಕೆ ಜೀವನಾಡಿಯಾಗಿದೆ ಯಾಕೆಂದರೆ ನಂಬಿಕೆಯಿಲ್ಲದೆ ದೇವರಬಳಿಯಿಂದ ಏನನ್ನೂ ಹೊಂದಲಾರೆವು (ಯಾಕೋಬನು 1:6-7) ಕ್ರಿಯೆಗಳಿಲ್ಲದ ನಂಬಿಕೆಯೂ ನಂಬಿಕೆಯಿಲ್ಲದ ಪ್ರಾರ್ಥನೆಯೂ ಸತ್ತದ್ದೇ ಆದ್ದರಿಂದ " ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ ಎಂಬುದು ನಮ್ಮ ಕರ್ತನಾದ ಯೇಸುಕ್ರಿಸ್ತನ ಮಾದರಿಯಾಗಿದೆ, ನಂಬಿಕೆಯು ಆತ್ಮೀಕ ರಣರಂಗದಲ್ಲಿ ಶತ್ರುವಿನ ಅಗ್ನಿಬಾಣಕ್ಕೆ ನಮ್ಮನ್ನು ತಪ್ಪಿಸಿ ಕಾಪಾಡುವ ಗುರಾಣಿಯಾಗಿದೆ (ಎಫೆಸದವರಿಗೆ 6:16)

4. ನಂಬಿಗಸ್ಥಿಕೆ (ಪ್ರಾಮಾಣಿಕತೆ): 
ನಾವು ನಮ್ಮ ಅನುದಿನದ ಸಾಮಾನ್ಯ ಜೀವನದಲ್ಲಿ ಪ್ರತಿಯೊಬ್ಬರೂ ನಮ್ಮಿಂದ ಪ್ರಾಮಾಣಿಕತೆಯನ್ನು ಎದುರುನೋಡುವದನ್ನು ಗ್ರಹಿಸಬಹುದು.  ಅಪ್ರಾಮಾಣಿಕರಾದ ಮನುಷ್ಯ್ರರೇ ಪ್ರಾಮಾಣಿಕತೆಯನ್ನು ಎದುರುನೋಡುವದಾದರೆ  ಪರಿಶುದ್ಧನೂ ನೀತಿವಂತನೂ ಆಗಿರುವ ಸರ್ವಶಕ್ತನಾದ ದೇವರು ನಮ್ಮ ಬಳಿ ಪ್ರಾಮಾಣಿಕತೆಯನ್ನು ಎದುರುನೋಡುವದು ನ್ಯಾಯವಲ್ಲವೇ? ಪ್ರಾಮಾಣಿಕತೆ ಎಂದರೆ ಅಂತರಂಗವಾಗಿಯೂ
ಬಹಿರಂಗವಾಗಿಯೂ ದೇವರಿಗಾಗಿ ಜೀವಿಸುವದರಲ್ಲಿಯೂ ಆತನಿಗಾಗಿ ಕಾರ್ಯಗಳನ್ನು ಮಾಡುವದರಲ್ಲಿಯೂ ನೂರಕ್ಕೆ ನೂರರಷ್ಠು ಆತನ ಮಾರ್ಗದಲ್ಲಿ ನಡೆಯುವದು ಸ್ವಲ್ಪವೂ ನಮ್ಮ ಸ್ವಂತ ಬಯಕೆಯಿಂದಾಗಲಿ ಆಲೋಚನೆಯಿಂದಾಗಲೀ ಸ್ವಂತ ಲಾಭಕ್ಕಾಗಿ ಏನನ್ನೂ ಮಾಡದೆ ಆತನ ಚಿತ್ತವನ್ನು ಮಾತ್ರವೇ ಮಾಡುವದು! ಹೀಗೆ ಪ್ರತಿಯೊಂದು ಕಾರ್ಯವನ್ನೂ ದೇವರ ಆಲೋಚನೆಯಂತೆ ಮಾಡಿದ ಮೋಶೆಯನ್ನು ದೇವರು ಇವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ಥನೆಂದು ಸಾಕ್ಷಿ ಕೊಡುತ್ತಾರೆ (ಅರಣ್ಯಕಾಂಡ 12:7) ಆದರೆ ಇದೇ ಮೋಶೆ ದೇವರ ಆಲೋಚನೆಯೊಂದಿಗೆ ತನ್ನ ಅಸಹನೆಯನ್ನು ಬೆರೆಸಿದಾಗ ಕಾನಾನಿನ ಮಹಾ ಭಾಗ್ಯವನ್ನು ಕಳೆದುಕೊಂಡು ಕಾನಾನಿನ ಬಾಗಲಲ್ಲೆ ತನ್ನ ಜೀವನವನ್ನು ಅರ್ಧಕ್ಕೆ ಮುಗಿಸುತ್ತಾನೆ (ಧರ್ಮೋಪದೇಶಕಾಂಡ 32: 48-52 ) ಆದ್ದರಿಂದ ಕಡೆವರೆಗು ಕರ್ತನಿಗೆ ನಂಬಿಗಸ್ಥರಾಗಿ ಜೀವಿಸುವದೇ ಪ್ರಾರ್ಥನೆಯಲ್ಲಿಯೂ ಜೀವನದಲ್ಲಿಯೂ ಜಯಭರಿತ ಜೀವಿತವಾಗಿದೆ.

5. ಕ್ರಮವಾದ ಪ್ರಾರ್ಥನಾ ಜೀವಿತ:
ಅನುದಿನವು ದೇವರಸಮ್ಮುಖದಲ್ಲಿ ದೇವರೊಂದಿಗೆ ಸಮಯ ಕಳೆಯುವದು ಒಬ್ಬ ಪ್ರಾರ್ಥನಾ ವೀರನ ಅಥವಾ ಆತ್ಮೀಕ ನಾಯಕನ ಜೀವನದ ಅಂಗವಾಗಿದೆ.  ಪ್ರಾರ್ಥನೆಯು ನಮ್ಮ ಅಂತರ್ಯ ಮನುಷ್ಯನು ಬಲಗೊಳ್ಳುವ ಸಮಯವು ನಾವು ದೇವರ ಯೋಜನೆಗಳನ್ನು ಅರಿಯುವ ಸ್ಥಳವೂ ಆಗಿದೆ!(ಯೆಶಾಯ 40:31 ದಾನಿಯೆಲ 2:18-19) 
ಆದರೆ ಪ್ರಾರ್ಥನೆಯಲ್ಲಿ ಕ್ರಮ ಮತ್ತು ಶಿಸ್ತು ಅತ್ಯಗತ್ಯವಾದದ್ದು. ಕ್ರಮವಿಲ್ಲದ್ದು ಅಂದರೆ ಅಸಡ್ಡೆತನತನದ ಪರಮಾವಧಿ ಪ್ರಾರ್ಥನೆಯಲ್ಲಿ ನಿರಾಸಕ್ತರಾಗಿ ಶರೀರದ ಆಯಾಸವನ್ನೂ ಸಂದರ್ಭ ಸನ್ನಿವೇಶಗಳ ಕಾರಣಗಳನ್ನು ಹೇಳಿ ತನ್ನನ್ನು ತಾನೇ ವಂಚಿಸಿಕೊಳ್ಳುವದು, ಹೊರಗೆ ಸೇವೆಗಾಗಿ ಹೋಗುತ್ತಿದ್ದೇನೆ, ಮನೆಸಂಧಿಸಲು ಹೋಹುತ್ತಿದ್ದೇನೆ ಎಂದು ಪ್ರಾರ್ಥನೆಗೆಂದು ಮೀಸಲಾದ ಸಮಯದಲ್ಲಿ ಬೇರೆ ಕೆಲಸಗಳನ್ನು ಯೋಜಿಸಿಕೊಂಡು ದೇವರ ಕೆಲಸಕ್ಕಾಗಿಯೇ ಹೋಗುತ್ತಿದ್ದೇನೆ ಎಂದು ನೆಪಗಳನ್ನು ಹೇಳಿ ಅಸಡ್ಡೆ ಮಾಡುದಾದರೆ ನೀವು ನಿಮ್ಮೊಳಗಿರುವ ಅಗ್ನಿಯನ್ನು ಕಳೆದುಕೊಂಡು ದೇವರಿಗಾಗಿ ಪ್ರಕಾಶಿಸಲಾರದೆ ತಣ್ಣಗಾಗಿಬಿಡುವಿರಿ (ಹಿಂಜಾರಿ ಹೋಗುವಿರಿ) ನೆನಪಿರಲಿ ಅನುದಿನವು ನಿಮ್ಮನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿ ದೇವರ ಬಳಿಯಿಂದ ಆಲೋಚನೆ ಹೊಂದಿ ಅದರಂತೆ ನಡೆಯದಿದ್ದರೆ ನೀವು ದಾರಿತಪ್ಪಿ ನಿಮ್ಮ ಗುರಿಯನ್ನು ಕಳೆದುಕೊಳ್ಳುವದು ನಿಶ್ಚಯ (ರೋಮಾಪುರದವರಿಗೆ 12:1-2 )



Monday 28 October 2013

ಶರೀರ ಆರೋಗ್ಯಕ್ಕಾಗಿ ಪ್ರಾರ್ಥನೆ






ಕರುಣಾನಿಧಿಯಾದ ದೇವರೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ!
ನನ್ನ ಪ್ರಾಣ, ಆತ್ಮೆ, ಶರೀರಗಳನ್ನು ನಿನ್ನ ಸನ್ನಿಧಿಯಲ್ಲಿ ಸಮರ್ಪಿಸುತ್ತೇನೆ, ನನ್ನ ಶರೀರದ ಆರೋಗ್ಯಕ್ಕಾಗಿ  ಬೇಡಿಕೊಳ್ಳುತ್ತೇನೆ! ದೇವರೇ, ವ್ಯಾಧಿಗೆ ಕಾರಣವಾದದ್ದು ನನ್ನಲ್ಲಿರುವುದಾದರೆ ನನ್ನನು ಕ್ಷಮಿಸು, ನನ್ನ ಅಪರಾಧಗಳನ್ನು ಮನ್ನಿಸು!  ನನ್ನ ಶರೀರಲ್ಲಿ ಬಲವನ್ನೂ ಮನಸ್ಸಿನಲ್ಲಿ ನವಚೈತನ್ಯವನ್ನೂ ಅನುಗ್ರಹಿಸು!  ನಾನು ಜೀವದಿಂದಿದ್ದು ನಿನ್ನ ನಾಮವನ್ನು ಪ್ರಖ್ಯಾತಿಪಡಿಸುವಂತೆ ಕರುಣಿಸು!

ವ್ಯಾಧಿಯನ್ನೂ, ಬಲಹೀನತೆಯನ್ನೂ ತಿರಸ್ಕರಿಸುತ್ತೇನೆ! ವ್ಯಾಧಿಗೆ ನನ್ನಲ್ಲಿ ಸ್ಥಳವಿಲ್ಲ! ಈ ಶರೀರವು ಕ್ರಿಸ್ತಯೇಸುವಿನ ರಕ್ತದಿಂದ ಕ್ರಯಕ್ಕೆ ಕೊಳ್ಳಲ್ಪಟ್ಟಿರುವುದರಿಂದ ಬಲಹೀನತೆಗೆ ನನ್ನ ಶರೀರದ ಮೇಲೆ ಅಧಿಕಾರವಿಲ್ಲ! ಯೇಸುವಿನ ಗಾಯದಿಂದ ನಾನು ಗುಣವಾಗಿದ್ದೇನೆ! ವ್ಯಾಧಿಯು ನನ್ನದಲ್ಲ, ಬಲಹೀನತೆಯು ನನ್ನದಲ್ಲ, ಆರೋಗ್ಯವೂ, ಬಲವೂ ನನ್ನದು! ನನ್ನ ಕರ್ತನಾದ ಯೇಸುವೇ, ನನ್ನನ್ನು ಗುಣಪಡಿಸಿದ ನಿನ್ನ ಗಾಯಗಳಿಗಾಗಿ ನಿನಗೆ ವಂದನೆ, ಯೇಸುವಿನ ನಾಮದಲ್ಲಿ ಆರೋಗ್ಯವನ್ನೂ, ಬಲವನ್ನೂ ಹೊಂದಿಕೊಳ್ಳುತ್ತೇನೆ, ಆಮೇನ್!

"ಆತನು(ಯೇಸು)  ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು"(1 ಪೇತ್ರನು 2:24)

                                      ಮುಂದುವರಿಯುವುದು...,



Friday 25 October 2013

ಆತ್ಮೀಕ ಆಶೀರ್ವಾದಕ್ಕಾಗಿ ಪ್ರಾರ್ಥನೆ





ಕೃಪೆಯಲ್ಲಿ ಐಶ್ವರ್ಯವಂತನಾದ ದೇವರೇ, "ಆತನು ಪರಲೋಕದಲ್ಲಿನ ಸಕಲ ಆತ್ಮೀಯವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ" (ಎಫೆಸದವರಿಗೆ 1:3) ಎಂಬ ವಾಕ್ಯದ ಪ್ರಕಾರ ನನ್ನನ್ನು ಆಶೀರ್ವದಿಸು!
ನಿನ್ನ ವಿಷಯವಾದ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳಿದುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನನಗೆ ದಯಪಾಲಿಸು! ನೀನು ನನ್ನ ಮನೋನೇತ್ರಗಳನ್ನು ಬೆಳಗಿಸಿ ದೇವರಾತ್ಮನ ಮೂಲಕ ಅಂತರ್ಯದಲ್ಲಿ ವಿಶೇಷ ಬಲಹೊಂದಿ ನಿನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬುದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲು ಸಮರ್ಥನಾಗುವಂತೆ ನನಗೆ ಅನುಗ್ರಹಿಸು.

ಪ್ರೀತಿಸ್ವರೂಪನಾದ ದೇವರೇ ನಿನ್ನ ಪವಿತ್ರಾತ್ಮನ ಮೂಲಕ ನಿನ್ನ ಪ್ರೀತಿರಸವನ್ನು ಧಾರಾಳವಾಗಿ ನನ್ನ ಹೃದಯದಲ್ಲಿ ಸುರಿಸಬೇಕಾಗಿ.  ಈ ಭೂಮಿಯಲ್ಲಿ ನಿನ್ನ ಪರವಾಗಿ, ನಿನ್ನ ನಾಮದ ಮಹಿಮೆಗಾಗಿ ಜೀವಿಸುವಂತೆಯೂ, ಕಾರ್ಯಸಾಧಿಸುವಂತೆಯೂ, ನಿನ್ನ ಪ್ರವಿತ್ರಾತ್ಮನ ಫಲಗಳಿಂದಲೂ-ವಫ಼್ರಗಳಿಂದಲೂ ಸಮವಾಗಿ ನನ್ನನ್ನು ಆಶೀರ್ವದಿಸು! ಪವಿತ್ರಾತ್ಮನನ್ನು ಅನುಸರಿಸಿ ಶರೀರಭಾವವನ್ನು ಸಾಯಿಸಿ ದಿನದಿಂದ ದಿನಕ್ಕೆ ನಿನ್ನ ಹೋಲಿಕೆಗೆ ಸರಿಯಾಗಿ ರೂಪಾಂತರ ಹೊಂದಿ ನಿನಗೆ ಹೇರಳವಾದ ಫಲಕೊಡುವಂತೆಯೂ ನನಗೆ ಅನುಗ್ರಹಿಸು! ಯೇಸುವಿನ ನಾಮದಲ್ಲಿ ಬೇಡುತ್ತೇನೆ ಪರಲೋಕದ ತಂದೆಯೇ.., ಆಮೇನ್!


                                                                                     ಮುಂದುವರಿಯುವುದು...,

Sunday 20 October 2013

ಸಾಲ ಮತ್ತು ಕೊರತೆಗಳಿಂದ ಹೊರಬರಲು ಪ್ರಾರ್ಥನೆ



ಕೃಪೆಯಲ್ಲಿ ಐಶ್ವರ್ಯವಂತನಾದ ದೇವರೇ, ನಿನ್ನ ನಾಮಕ್ಕೆ ಮಹಿಮೆ ಉಂಟಾಗಲಿ! ನನಗೆ ಸಹಾಯವು ಬರುವ ಪರ್ವತವಾದ ನಿನ್ನ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ, ದೇವರೇ ಇದುವರೆಗೂ ಕೊರತೆ\ಸಾಲವು ನನ್ನ ಜೀವಿತವನ್ನು ಆಳಲು ನಾನು ಅನುಮತಿಸಿದ್ದಕ್ಕಾಗಿ ನನ್ನನ್ನು ಕ್ಷಮಿಸು! ಹೃದಯದ ಆಲೋಚನೆಯಿಂದಲೂ, ಮಾತಿನಿಂದಲೂ ಕೊರತೆಗೆ \ ಸಾಲಕ್ಕೆ ಬಾಗಿಲು ತೆರೆದ ತಪ್ಪನ್ನು ಮನ್ನಿಸು! 

ನಿನ್ನ ಸನ್ನಿಧಿಯಲ್ಲಿ ಬೇಡಿಕೊಳ್ಳುವ ಈ ಸಮಯದಲ್ಲಿ ನನ್ನ ಎಲ್ಲಾ ಕೊರತೆಗಳು \ ಸಾಲಗಳು ಮಾರ್ಪಡಲಿ, ’ಕರ್ತನು ನನ್ನ ಕುರುಬನು ನಾನು ಕೊರತೆಪಡೆನು’ (ಕೀರ್ತನೆ 23:1)  ಎಂಬ ವಾಕ್ಯವು ನನ್ನ ಜೀವಿತದಲ್ಲಿ ನೆರವೇರಲೆ! ’ನಾನು ಐಶ್ವರ್ಯವಂತನಾಗಲು ಶಿಲುಬೆಯಲ್ಲಿ ನೀನು ಬಡವನಾದೆ’
 (2 ಕೊರಿಂಥದವರಿಗೆ 8:9) ಎಂಬ ಸತ್ಯವನ್ನು ಅಂಗೀಕರಿಸುತ್ತೇನೆ!

ಸಾಲ ಮತ್ತು ಕೊರತೆಗಳೋಂದಿಗೆ ನನ್ನ ಒಪ್ಪಂದಗಳನ್ನು ರದ್ದು ಮಾಡುತ್ತೇನೆ! ಇನ್ನು ಸಾಲ ಕೊರತೆಯಲ್ಲಿ ಮುಂದುವರಿಯಲು ನಾನು ತಯಾರಿಲ್ಲ, ಸಾಲ \ ಕೊರತೆಗಳನ್ನು ಮನ:ಪೂರ್ವಕವಾಗಿ ತ್ಯಜಿಸುತ್ತೇನೆ!

ಕ್ರಿಸ್ತಯೇಸುವಿನಲ್ಲಿ ಉಂಟಾಗಿರುವ ಅಬ್ರಹಾಮನ ಸಕಲ ಆಶೀರ್ವಾದದೊಳಗೆ ನಾನು ಮನ:ಪೂರ್ವಕವಾಗಿ ಪ್ರವೇಶಿಸುತ್ತೇನೆ! (ಗಲಾತ್ಯದವರಿಗೆ 3:13)

ನನ್ನ ಆದಾಯದಿಂದಲೂ, ನನ್ನ ದುಡಿಮೆಯ ಪರಿಶ್ರಮದಿಂದಲೂ ದೇವರನ್ನು ಮಹಿಮೆಪಡಿಸುತ್ತೇನೆ! ಆದದ್ದರಿಂಡ ಇಂದಿನಿಂದ ನನ್ನ ಕೈಗಳು ಆಶೀರ್ವದಿಸಲ್ಪಟ್ಟ ಕೈಗಳೂ ನನ್ನ ಆದಾಯವು ನನ್ನ ಅಗತ್ಯಕ್ಕಿಂತ ಹೆಚ್ಚಿನದೂ ಆಗಿದೆ!

ನನ್ನ ಅಗತ್ಯತೆಗಳನ್ನು ಸಂದಿಸುವ ಯೆಹೋವಯೀರೆ ನಿನಗೆ ವಂದನೆ! ಐಶ್ವರ್ಯವನ್ನು ಸಂಪಾದಿಸಲು ಬೇಕಾದಬಲವು ನಿನ್ನಿಂದ ನನಗೆ ಒದಗಿಬರಲಿ, ಯೇಸುವಿನ ನಾಮದಲ್ಲಿ ಬೇಡುತ್ತೇನೆ ಪರಲೋಕದ ತಂದೆಯೇ, ಆಮೇನ್!

"ನನ್ನ ದೇವರು ಕ್ರಿಸ್ತಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" (ಫಿಲಿಪ್ಪಿಯರಿಗೆ 4:19)

                                                                                                          ಮುಂದುವರಿಯುವದು...,